ಮುಂದೆ ಹೇಗೆ ಜೀವನ….?!

 

ಹೊಸ ವರ್ಷದ ಕ್ಯಾಲೆಂಡರ್‌ ಈಗಷ್ಟೇ ತೂಗುಹಾಕಿದ್ದೇವೆ. ಕ್ಯಾಲೆಂಡರ್‌ ಮೇಲೆ ಪೆನ್ನಿನ ಗುರುತುಗಳು ಇನ್ನೂ ಮೂಡಿಲ್ಲ. ನಮ್ಮ ಭೂತ, ಅದಕ್ಕೂ ಹೆಚ್ಚಾಗಿ ಭವಿಷ್ಯದ ಬಗ್ಗೆ ಯೋಚಿಸಲು ಇದು ಸಕಾಲ. ಅದರಿಂದ ಒಂಚೂರು ಪ್ರಯೋಜನವಾಗಬಹುದೇನೋ?!
 
ಮನುಷ್ಯನಿಗೆ ಈಗ ಏನುಂಟು, ಏನಿಲ್ಲ ಹೇಳಿ! ಕರೆಂಟೇ ತಲುಪದ ಊರುಗಳೇ ಇದ್ದ ಜಾಗದಲ್ಲಿ ಈಗ ಮೊಬೈಲ್‌ ನೆಟ್‌ವರ್ಕ್‌ ಇಲ್ಲದಿರುವ ಹಳ್ಳಿಗಳೇ ಕಡಿಮೆ. ಸೈಕಲ್‌ ಎಂದರೇನೇ ಕಣ್ಣಗಲಿಸಿ ನೋಡುತ್ತಿದ್ದ ನಾವೀಗ ಕಾರ್‌ ಬಂದರೂ ಕೇರ್‌ ಮಾಡುವುದಿಲ್ಲ. ಫೋನಿದ್ದರೆ ತಿಂಡಿ ಊಟಕ್ಕೆ ಯಾರ ಹಂಗಿಲ್ಲ. ಬರೆ ಎಂದರೆ ಬರೆಯುವ, ಓದು ಎಂದರೆ ಓದುವ ಎಐ ತಂತ್ರಜ್ಞಾನ. ಎಲ್ಲರೂ ಇಷ್ಟೊಂದು ಅದೃಷ್ಟವಂತರಲ್ಲದಿದ್ದರೂ, ಒಟ್ಟಾರೆಯಾಗಿ ಮನುಷ್ಯ ತಾನೊಂದು ಬುದ್ಧಿವಂತ ಪ್ರಾಣಿ ಎಂದು ಸಾಬೀತುಪಡಿಸಿದ್ದಾನೆ!
 
ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ, ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ, ಸಂವಹನದಲ್ಲಿ ಮಿತಿಯಿಲ್ಲದ ವೇಗ - ಇದೆಲ್ಲವೂ ನಮ್ಮ ಜೀವನವನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದೆ. ಪ್ರತಿ ಸಮಸ್ಯೆಗೂ ಒಂದು ಆ್ಯಪ್, ಪ್ರತಿ ಪ್ರಶ್ನೆಗೂ ಒಂದು ಸರ್ಚ್ ಎಂಜಿನ್… ಹೀಗೆ ಈ ಕಣ್ಣಿಂದ ಇನ್ನೂ ಏನೇನೆಲ್ಲಾ ನೋಡುತ್ತೇವೋ! ಆದರೂ, ಹೊರಗೆಲ್ಲಾ ತಳುಕು-ಬಳುಕು, ಒಳಗೆ ಬರೀ ಹುಳುಕು ಎಂಬ ಮಾತು ಪೂರ್ತಿ ಅಲ್ಲವೆಂದಾದರೂ ಒಂದಷ್ಟು ಮಟ್ಟಿಗೆ ಸತ್ಯ. ಈಗ ಕಳೆದುಕೊಳ್ಳುತ್ತಿರುವುದರ ಬಗ್ಗೆ ನಾವು ಜಾಣ ಕುರುಡು ಪ್ರದರ್ಶಿಸುತ್ತಿದ್ದೇವೆ. ಮುಂದಿನ ದಿನಗಳ ಬಗ್ಗೆಯಂತೂ ಕಲ್ಪಿಸಿಕೊಳ್ಳಲೂ ಸಿದ್ಧರಿಲ್ಲ!
 
ಬಡತನದ ಶ್ರೀಮಂತಿಕೆ!
ಇದೆಲ್ಲಾ ಬರೀ ಕಲ್ಪನೆ, ಋಣಾತ್ಮಕ ಚಿಂತನೆ, ನಿರಾಶಾವಾದ ಎಂದೆಲ್ಲಾ ಹಂಗಿಸುವ ಸ್ಥಿತಿಯಲ್ಲಿ ನಾವಿಲ್ಲ. ನಮ್ಮ ಹಿರಿಯವರು ತಲೆಯ ಮೇಲೊಂದು ಸೂರಿಲ್ಲದೆ ಬದುಕಿರಬಹುದು, ಸೀಮೆ ಎಣ್ಣೆ ದೀಪದಲ್ಲೇ ಬೆಳಕು ಕಂಡಿರಬಹುದು, ದಿನಂಪ್ರತಿ ಮೈಲುಗಟ್ಟಲೆ ನಡೆದಿರಬಹುದು. ಈಗಿನಷ್ಟು ದುಡ್ಡು, ಸೌಕರ್ಯ ಇದ್ದಿರಲಿಕ್ಕಿಲ್ಲ. ಹಾಗೆಂದು ಅವರೇನೂ ಬಡವರಲ್ಲ. ಎಲ್ಲೆಲ್ಲೂ ಹಚ್ಚಹಸಿರು, ತಂಪಾದ ಗಾಳಿ, ನದಿ-ಕೆರೆ-ತೊರೆಗಳು, ಪ್ರಕೃತಿಯ ಒಡನಾಟ, ಸಾಕುಪ್ರಾಣಿಗಳ ಸಂಗವಿತ್ತು. ಮನೆಯೆಂಬ ದೇವಾಲಯ, ಸಂಸಾರವೆಂಬ ಬಿಟ್ಟಿರಲಾರದ ಅನುಬಂಧ ಎಲ್ಲವೂ ಇತ್ತು. ಆ ಶ್ರೀಮಂತಿಕೆ ಈ ಬಡತನವನ್ನು ಮರೆಸುತ್ತಿತ್ತು. ಕಳೆದ ಶತಮಾನದ ಕೊನೆಯಲ್ಲಿ ಜನಿಸಿದ ನಾವೂ ಈ ನಿಟ್ಟಿನಲ್ಲಿ ಸ್ವಲ್ಪ ಅದೃಷ್ಟವಂತರೇ. ಆದರೆ ಈಗ?
 
ಭವಿಷ್ಯ ಕಠೋರ
ಮುಂದಿನ ಪೀಳಿಗೆ ಎದುರಿಸಲಿರುವ ಸವಾಲುಗಳು ಇತಿಹಾಸದಲ್ಲಿ ಯಾವಾಗಲೂ ಇರಲಿಲ್ಲ. ನಮ್ಮ ಅಜ್ಜ-ಅಜ್ಜಿಯರು ಸಹಜವಾಗಿ ಅನುಭವಿಸಿದ ಮೂಲಭೂತ ಸೌಕರ್ಯಗಳು ನಮ್ಮ ಮಕ್ಕಳಿಗೆ ದುಸ್ಸಾಧ್ಯವಾಗಲಿವೆ. ವಿವಿಧ ಬಗೆಯ ಮಾಲಿನ್ಯಗಳು, ಎಲ್ಲಿ ಬಿಸಾಡಿದರೂ ನಮ್ಮತ್ತಲೇ ಬರುವಷ್ಟು ಪ್ಲಾಸ್ಟಿಕ್‌, ಜೊತೆಗೆ ಕಾಡು ಕಡಿದು ಬಯಲಾಗಿಸಿದ್ದೇವೆ. ನಾವು ಮುಂದಿನ ಪೀಳಿಗೆಗೆ ಹಣ ಕಟ್ಟಿಡಬಹುದು, ಆದರೆ ಪ್ರಕೃತಿದತ್ತ ಸಂಪನ್ಮೂಲಗಳನ್ನು ಉಳಿಸಲು ಮರೆತಿದ್ದೇವೆ, ಮರೆಯುತ್ತಲೇ ಇದ್ದೇವೆ. ಪರಿಣಾಮ…
 
ಶುದ್ಧ  ಗಾಳಿಯೆಂಬ ವಿಶೇಷ ಸೌಲಭ್ಯ!
ಶುದ್ಧ ಗಾಳಿಯಲ್ಲಿ ಉಸಿರಾಡುವುದು ನಮ್ಮಕ್ಕೆಂದು ನಾವು ಭಾವಿಸಬಹುದು, ಆದರೆ ಅದನ್ನು ಶುದ್ಧವಾಗಿಡುವುದೂ ನಮ್ಮ ಕರ್ತವ್ಯ. ಆದರೆ ಅದನ್ನು ನಾವು ಮರೆತಿದ್ದೇವೆ. ಅಂದರೆ, ಮುಂಬರುವ ದಶಕಗಳಲ್ಲಿ ಶುದ್ಧ ವಾಯು ಒಂದು ಐಷಾರಾಮಿ ವಸ್ತುವಾಗಲಿದೆ. ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯ, ಕಾರ್ಖಾನೆಗಳ ಹೊಗೆ, ವಾಹನಗಳ ಹೊರಸೂಸುವಿಕೆ - ಇವೆಲ್ಲವೂ ನಮ್ಮ ವಾತಾವರಣವನ್ನು ವಿಷಕಾರಿಯಾಗಿಸುತ್ತಿವೆ. ಮುಂದಿನ ಪೀಳಿಗೆಯ ಮಕ್ಕಳು ಹೊರಗೆ ಆಡಲು ಹೋಗುವ ಮುನ್ನ ಆಕ್ಸಿಜನ್ ಮಾಸ್ಕ್ ಧರಿಸಬೇಕಾಗಬಹುದು. ಪ್ರತಿ ಮನೆಯಲ್ಲೂ ವಾಯು ಶುದ್ಧೀಕರಣ ಯಂತ್ರಗಳು ಕಡ್ಡಾಯವಾಗಬಹುದು. ಉಸಿರಾಟದ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆಗಳು ಸಾಮಾನ್ಯವಾಗುತ್ತವೆ. "ಹೊರಗೆ ಹೋಗಿ ಆಡು" ಎಂದು ಯಾರೂ ಹೇಳಲಾಗದ ಪರಿಸ್ಥಿತಿ ಬರಬಹುದು. ಈಗ ದೆಹಲಿಯಲ್ಲಿ ಕಾಣುತ್ತಿರುವುದು ಒಂದು ಸ್ಯಾಂಪಲ್‌ ಮಾತ್ರ!
 
ನೀರೆಂಬ ಅಮೃತ
ಇಂದು ನಾವು ನಲ್ಲಿ ತೆರೆದರೆ ಹರಿಯುವ, ಸ್ನಾನಕ್ಕೆ ಬಕೆಟ್‌ಗಟ್ಟಲೆ ಸಿಗುವ ನೀರು ನಮ್ಮ ಮಕ್ಕಳಿಗೆ ಕಥೆಯಾಗಿ ಉಳಿಯಬಹುದು. ಅಂತರ್ಜಲ ಮಟ್ಟ ಅಪಾಯಕಾರಿಯಾಗಿ ಇಳಿಯುತ್ತಿದೆ, ನದಿಗಳು ಒಣಗುತ್ತಿವೆ, ಸರೋವರಗಳು ಕಣ್ಮರೆಯಾಗುತ್ತಿವೆ. ನೀರಿನ ಕೊರತೆಯಿಂದಾಗಿ ರಾಜ್ಯಗಳ ನಡುವೆ, ದೇಶಗಳ ನಡುವೆ ಸಂಘರ್ಷಗಳು ತೀವ್ರವಾಗುತ್ತವೆ. ಹೀಗೇ ಆದರೆ ಪ್ರತಿ ಹನಿ ನೀರು ಚಿನ್ನಕ್ಕಿಂತ ಬೆಲೆಯುಳ್ಳದ್ದಾಗುತ್ತದೆ. ಯಂತ್ರಗಳನ್ನು ಬಳಸಿ ಶುದ್ಧೀಕರಿಸಿದ ನೀರು ಶ್ರೀಮಂತರಿಗೆ ಮಾತ್ರ ಎಂಬಂತಾಗಬಹುದು. ಕುಡಿಯುವ ನೀರಿಲ್ಲದೆ ಆರೋಗ್ಯ ಸಮಸ್ಯೆಗಳು ಏರಬಹುದು, ದುಡಿಮೆ ಅಸಾಧ್ಯವೆನಿಸಬಹುದು, ವಿವಿಧ ಆರೋಗ್ಯ ಸಮಸ್ಯೆಗಳು ಕಾಡಬಹುದು….ಹೀಗೆ ಪಟ್ಟಿ ಮುಂದುವರಿಯುತ್ತದೆ.
 
ರೋಗ ಉಚಿತ- ಖಚಿತ
ತಂತ್ರಜ್ಞಾನ ಬೆಳೆದಂತೆ ರೋಗಗಳೂ ಬೆಳೆಯುತ್ತಿವೆ. ಮಾಲಿನ್ಯದಿಂದ ಉಂಟಾಗುವ ಕ್ಯಾನ್ಸರ್ ಪ್ರಕರಣಗಳು ಗಗನಕ್ಕೇರುತ್ತವೆ. ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ನಮ್ಮ ರಕ್ತದಲ್ಲಿಯೇ (ಅಮ್ಮನ ಎದೆಹಾಲಿನಲ್ಲೂ) ಸೇರುತ್ತಿವೆ. ಮಾನಸಿಕ ಅಸ್ವಸ್ಥತೆಗಳು ಹೆಚ್ಚಾಗುತ್ತವೆ. ಡಿಜಿಟಲ್ ಸಮಸ್ಯೆಗಳು. ಆಹಾರದಲ್ಲಿ ನೈಸರ್ಗಿಕ ಪೌಷ್ಟಿಕಾಂಶಗಳ ಕೊರತೆ, ಕೃತಕ ಪದಾರ್ಥಗಳ ಮಿತಿಮೀರಿದ ಬಳಕೆ   ಇವೆಲ್ಲವೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆಸ್ಪತ್ರೆಗಳು ಎಂದೂ ಖಾಲಿಯಾಗವು, ಆದರೆ ಚಿಕಿತ್ಸೆಯ ವೆಚ್ಚ ಸಾಮಾನ್ಯರಿಗೆ ಎಟಕುವುದು ಕಷ್ಟ.
 
ಮುಳುಗುವ ನಗರಗಳು!
ಅಂಟಾರ್ಟಿಕದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ. ಸಮುದ್ರ ಮಟ್ಟರುವುದರಿಂದ ನಮ್ಮ ಮಂಗಳೂರು ಸೇರಿದಂತೆ ಕರಾವಳಿ ನಗರಗಳು ಅಪಾಯದಲ್ಲಿವೆ. ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆಯ ಮೇಲಿನ ಅಂತರಸರ್ಕಾರಿ ನಿಯೋಗ (ಐಪಿಸಿಸಿ)ಯೇ ಇದನ್ನು ದೃಢಪಡಿಸಿದೆ.  ಮುಂಬೈ, ಕೋಲ್ಕತ್ತಾ, ಚೆನ್ನೈ ಮೊದಲಾದ ಹೆಸರುಗಳು ಭವಿಷ್ಯದಲ್ಲಿ ಇತಿಹಾಸ ಪುಸ್ತಕಗಳಲ್ಲಿ ಮಾತ್ರ ಉಳಿಯಬಹುದು. ಹಾಗೇನಾದರೂ ಆದರೆ ಆರ್ಥಿಕತೆ ಕೊಚ್ಚಿಹೋಗುತ್ತದೆ, ಕೋಟ್ಯಂತರ ಜನರು ನಿರಾಶ್ರಿತರಾಗುತ್ತಾರೆ. ಕರಾವಳಿಯ ಜನರು ಒಳನಾಡುಗಳಿಗೆ ವಲಸೆ ಹೋಗಬೇಕಾಗುತ್ತದೆ. ಜಾಗತಿಕ ತಾಪಮಾನದ ಹೆಚ್ಚಳ ಹವಾಮಾನ ಬದಲಾವಣೆಗಳನ್ನು ತೀವ್ರಗೊಳಿಸುತ್ತದೆ. ಬರಗಾಲಗಳು, ಪ್ರವಾಹಗಳು, ಅನಿರೀಕ್ಷಿತ ಚಂಡಮಾರುತಗಳು, ಕಾಡ್ಗಿಚ್ಚು ಹೀಗೆ…
 
ಭೂಮಿಯೇ ಭವಿಷ್ಯದ ನರಕ?
ನಾವು ಏನೂ ಮಾಡದೆ ಯಾವುದೋ ಮ್ಯಾಜಿಕ್‌ ಸಂಭವಿಸಬಹುದು ಎಂದು ನಿರೀಕ್ಷಿಸುವುದು ತಪ್ಪು. ಈಗಿನಷ್ಟು ವೇಗದಲ್ಲಿ ನಗರೀಕರಣ, ಪರಿಸರ ನಾಶ ಮುಂದುವರಿದರೆ ಈ ಎಲ್ಲಾ ಕಲ್ಪನೆ ನಿಜವಾಗಲು ಹೆಚ್ಚು ಸಮಯ ಬೇಕಾಗದು. ನೆನಪಿರಲಿ, ಈಗಲೇ ನಿಸರ್ಗ ಕೆಲವೊಂದು ಸೂಚನೆಗಳನ್ನು ರವಾನಿಸಲಾರಂಭಿಸಿದೆ. ಮೇಲೆ ಹೇಳಿದ ಎಲ್ಲಾ ಭಯಾನಕ ಸಂಗತಿಗಳನ್ನು ನಾವು ತಡೆಯದಿದ್ದರೆ, ಭೂಮಿಯೇ ನರಕವಾಗುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. 
 
 ಇಂದಿನಿಂದಲೇ ಬದಲಾಗಬೇಕು!
ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ನಾಳೆಯ ಜಗತ್ತನ್ನು ನಿರ್ಧರಿಸುತ್ತವೆ. ಪರಿಸರ ಸಂರಕ್ಷಣೆಯನ್ನು ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಕೃತಿಗಿಳಿಯಬೇಕು. ನಾವು ಮಕ್ಕಳಿಗೆ ಬೇರೆ ಎಲ್ಲಾ ಸೌಲಭ್ಯ ಮಾಡಿಡುವಲ್ಲಿ ತೋರುವ ಕಾಳಜಿ ಪರಿಸರವನ್ನು ರಕ್ಷಿಸುವುದರಲ್ಲಿಯೂ ಬೇಕಾಗುತ್ತದೆ.  ದಿನನಿತ್ಯದ ಜೀವನದಲ್ಲಿ, ಪ್ರತಿ ವ್ಯಕ್ತಿಯೂ ಜವಾಬ್ದಾರಿ ತೆಗೆದುಕೊಳ್ಳಬೇಕು. ತ್ಯಾಜ್ಯ ಕಡಿಮೆ ಮಾಡುವುದು, ನವೀಕರಿಸಬಹುದಾದ ಇಂಧನಗಳನ್ನು ಬಳಸುವುದು, ವನ, ಜಲ, ವಾಯು ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಸರ್ಕಾರಗಳು ಕಠಿಣ ನೀತಿಗಳನ್ನು ಜಾರಿಗೊಳಿಸದೆ ವಿಧಿಯಿಲ್ಲ. ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣದ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಮ್ಮೆ ಯೋಚಿಸಿ ಇದೆಲ್ಲಾ ಆಗಲು ಸಾಧ್ಯವೇ?
 
ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುವ ಸವಾಲು
ಹಣ ಮತ್ತು ತಂತ್ರಜ್ಞಾನ ಮಾತ್ರ ಸಾಕಾಗುವುದಿಲ್ಲ. ನಮ್ಮ ಮಕ್ಕಳಿಗೆ ಬೇರೆ ರೀತಿಯ ಶಿಕ್ಷಣ ಬೇಕು, ಬೇರೆ ರೀತಿಯ ಸಿದ್ಧತೆ ಬೇಕು. ಮೊದಲನೆಯದಾಗಿ, ಅವರಿಗೆ ಪರಿಸರ ಸಂರಕ್ಷಣೆಯ ಮಹತ್ವ ಕಲಿಸಬೇಕು. ನೀರು ಉಳಿಸುವುದು, ವಿದ್ಯುತ್ ಸಂರಕ್ಷಿಸುವುದು, ಮರು ಬಳಕೆ ಮಾಡುವುದು - ಇವು ಉಪದೇಶಗಳಲ್ಲ, ಬದುಕಿನ ಅಭ್ಯಾಸಗಳಾಗಬೇಕು. ಎರಡನೆಯದಾಗಿ, ಅವರಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಅನಿವಾರ್ಯ. ಕಷ್ಟಗಳನ್ನು ಎದುರಿಸುವ ಶಕ್ತಿ, ಬದಲಾಗುತ್ತಿರುವ ಪರಿಸರದೊಂದಿಗೆ ಏಗುವ ಸಾಮರ್ಥ್ಯ. ಮೂರನೆಯದಾಗಿ, ಒಂದು ಸಮುದಾಯವಾಗಿ, ಸಮಾಜವಾಗಿ ಯೋಚಿಸಬೇಕಾಗುತ್ತದೆ. ಒಬ್ಬರಿಗೊಬ್ಬರು ಸಹಾಯ ಮಾಡುವ ಮನೋಭಾವ, ಸಹಕಾರದ ಮನಸ್ಸು ಇದ್ದರಷ್ಟೇ ಜೀವನ.
 
ಅವರಿಗೆ ಕಂಪ್ಯೂಟರ್‌ ಕೌಶಲ್ಯವಲ್ಲ, ಬದುಕುವ ಕೌಶಲ್ಯಗಳನ್ನು ಕಲಿಸಬೇಕು. ಆಹಾರ ಬೆಳೆಯುವುದು ಹೇಗೆ, ನೀರು ಸಂಗ್ರಹಿಸುವುದು ಹೇಗೆ, ಕಸವನ್ನು ಸಂಸ್ಕರಿಸುವುದು ಹೀಗೆ…ಇವೆಲ್ಲಾ ಆದ್ಯತೆಗಳಾಗಬೇಕು. ಭಾವನಾತ್ಮಕ ಬಲವನ್ನು ಬೆಳೆಸಬೇಕು. ಹತಾಶೆಯಲ್ಲೂ ಭರವಸೆ ಕಾಣುವ ದೃಷ್ಟಿ, ಪ್ರತಿಕೂಲತೆಗಳಲ್ಲೂ ಹೋರಾಡುವ ಧೈರ್ಯ ಇದ್ದರಷ್ಟೇ ಅವರು ಬದುಕಬಹುದು. ಲಭ್ಯವಿರುವ ಕಡಿಮೆ ಸಂಪನ್ಮೂಲಗಳಲ್ಲಿ ಬದುಕಲು ಬೇಕಾದ ಜಾಣ್ಮೆ ಮತ್ತು ಆಶಾವಾದವನ್ನು ಅವರಲ್ಲಿ ತುಂಬಬೇಕಷ್ಟೇ.
 
ತಮಾಷೆ ಅಲ್ಲವೇ ಅಲ್ಲ!
ಕೆಲವು ದಶಕಗಳ ಹಿಂದೆ, ಮನುಷ್ಯ ರೋಬೋಟ್‌ ಕಂಡುಹಿಡಿದ್ದಾನಂತೆ. ಅದು ನಮ್ಮ ಹಾಗೇ ಕೆಲಸ ಮಾಡುತ್ತಂತೆ ಅಂತೆಲ್ಲಾ ಮಾತನಾಡುತ್ತಿದ್ದರು. ಅದು ನಿಜವಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ. ಯಂತ್ರಗಳು ಹೇಳಿದಂತೆ ಮನುಷ್ಯ ಕೇಳಬೇಕಂತೆ, ಎನ್ನಲಾಗುತ್ತಿತ್ತು. ಈಗ ಮೆದುಳಿಗೂ ಚಿಪ್‌ ಅಳವಡಿಸುವ ಕಾಲದಲ್ಲಿದ್ದೇವೆ. ಆ ಮಾತೂ ನಿಜವಾಗಿದೆ. ಇನ್ನು ನಿಜ ಸ್ಥಿತಿ ಕಣ್ಣೆದುರೇ ಇರುವಾಗ, ಮುಂದಿನ ದಿನಗಳಲ್ಲಿ ದುರಂತಗಳು ಕಾದಿವೆ ಎಂಬುದನ್ನು ಅಲ್ಲಗೆಳೆಯಲು ಕಾರಣಗಳಿಲ್ಲ. ಒಟ್ಟಿನಲ್ಲಿ, ನಮ್ಮ ಮುಂದಿನ ಪೀಳಿಗೆ ಅತಿದೊಡ್ಡ ವಿರೋಧಾಭಾಸದೊಂದಿಗೆ ಬದುಕಲಿದೆ.
 
ಇನ್ನು, ನಮ್ಮ ಮಕ್ಕಳನ್ನು ಭವಿಷ್ಯಕ್ಕೆ ನಾವು ಸಿದ್ಧಪಡಿಸಿದ್ದೇವೆ. ಅವರು ಕೃತಕ ಬುದ್ಧಿಮತ್ತೆ ಬಳಸಿ, ಕೃತಕವಾಗಿ ತಯಾರಿಸಿದ ಗಾಳಿ, ನೀರು ಸೇವಿಸಿ ಮತ್ತು ಆಹಾರವನ್ನು ಕೃತಕವಾಗಿ ಸಂಪಾದಿಸಿದ ಹಣದಲ್ಲಿ ಖರೀದಿಸಿ, ʼಕೃತಕ ಸಂತೋಷದಲ್ಲಿʼ ಬದುಕಲು ಕಲಿತುಕೊಳ್ಳುತ್ತಾರೆ, ಎಂಬ ವಿಶ್ವಾಸ ನಿಮ್ಮಲ್ಲಿದ್ದರೆ ನಿಮ್ಮಂತಾ ಆಶಾವಾದಿ, ಧನಾತ್ಮಕ ಚಿಂತಕ ಬೇರಿಲ್ಲ!
 
ಗುರುಪ್ರಸಾದ್‌ ಟಿ.ಎನ್‌
ಹವ್ಯಾಸಿ ಬರಹಗಾರ, ಮಂಗಳೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಎಮೋಜಿ : ಸಂಸ್ಕೃತಿಗಳಾಚೆಗೆ ಹೃದಯಗಳನ್ನು ಬೆಸೆಯುವ ಸಾರ್ವತ್ರಿಕ ಭಾಷೆ

ಬೇಸರದಲ್ಲಿ ಬರೆದದ್ದು…ಹೌದಾ?!